ಸೌಜನ್ಯಗೆ ನ್ಯಾಯ ಸಿಗದಂತೆ ಮಾಡಿದವರು ಯಾರು ಗೊತ್ತಾ ಎಂಬುದು ಬಯಲಾದ ದಿನವೇ ವಸಂತ ಬಂಗೇರರನ್ನು ಸಾಯಿಸಿದರು.
ನವೀನ್ ಸೂರಿಂಜೆ ಫೇಸ್ ಬುಕ್ ಪೋಸ್ಟ್
“ಸೌಜನ್ಯಗೆ ನ್ಯಾಯ ಸಿಗುತ್ತೆ ಅಂದುಕೊಂಡಿದ್ದೆ. ಆದರೆ ನ್ಯಾಯ ಸಿಗಲ್ಲ. ಸೌಜನ್ಯಗೆ ನ್ಯಾಯ ಸಿಗದಂತೆ ಮಾಡಿದವರು ಯಾರು ಎಂಬುದು ನನಗೆ ಗೊತ್ತಿದೆ. ಒಂದಲ್ಲ ಒಂದು ದಿನ ನಾನು ಈ ರಹಸ್ಯವನ್ನು ಬಿಚ್ಚಿಡ್ತೀನಿ. ಆಗ ನನ್ನ ಕೊಲೆಯೂ ಆಗಬಹುದು” ಎಂದು 2023 ಆಗಸ್ಟ್ 08 ರಂದೇ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದರು. ಕೊನೆಗೂ ಅವರು ಹೇಳಿದಂತೆಯೇ ಆಯಿತು.
ಜನರ ಹೋರಾಟದ ಜೊತೆ ಇದ್ದು, ಪ್ರವಾಹದ ವಿರುದ್ದ ಈಜುತ್ತಿದ್ದ ವಸಂತ ಬಂಗೇರರ ನುಡಿನಮನ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ನುಡಿನಮನ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ನಿರೀಕ್ಷೆಯಿತ್ತು. ಆದರೆ ಅದೇ ದಾರಿಯಲ್ಲಿ ಬಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇರವಾಗಿ ಧರ್ಮಸ್ಥಳಕ್ಕೆ ಹೊರಟರು. ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಮಾಡುವುದು ಅವರಿಷ್ಟ. ಅದಾದ ಬಳಿಕ ಅವರು ಸೌಜನ್ಯ ಕೊಲೆ ಪ್ರಕರಣ, ಅಕ್ರಮ ಭೂ ವಿವಾದದ ಬಗ್ಗೆ ಜನರ ಹೋರಾಟ ಎದುರಿಸುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಯನ್ನು ಭೇಟಿ ಮಾಡಿದ್ದು ಯಾಕೆ ?
ಸಾಯುವವರೆಗೂ ವಿರೇಂದ್ರ ಹೆಗ್ಗಡೆಯನ್ನೂ, ಅವರ ಅಕ್ರಮಗಳನ್ನು ವಿರೋಧಿಸುತ್ತಲೇ ಹೋರಾಟ ಮಾಡಿಕೊಂಡು ಬಂದ ವಸಂತ ಬಂಗೇರರ ನುಡಿ ನಮನ ದಿನವೇ ಸಿದ್ದರಾಮಯ್ಯ ವಿರೇಂದ್ರ ಹೆಗ್ಗಡೆಯನ್ನು ಭೇಟಿ ಮಾಡಿದರು. ಆ ಮೂಲಕ ಸೌಜನ್ಯಗೆ ನ್ಯಾಯ ವಂಚಿಸಿದವರು ಯಾರು ಎಂಬುದು ಬಯಲಾಗುವುದರ ಜೊತೆಗೆ ವಸಂತ ಬಂಗೇರ ಹೇಳಿದಂತೆಯೇ, ರಹಸ್ಯ ಬಯಲಾದ ದಿನವೇ ದೈಹಿಕವಾಗಿ ನಮ್ಮೊಂದಿಗಿಲ್ಲದ ವಸಂತ ಬಂಗೇರರನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸಾಯಿಸಿದರು.