ಬಂಟ್ವಾಳ, ಜುಲೈ 13: ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ನವೀಕರಣಗೊಂಡಿರುವ ಬಂಟ್ವಾಳ ರೈಲು ನಿಲ್ದಾಣವನ್ನು ಇದೇ ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸುವ ನಿರೀಕ್ಷೆಯಿದೆ. ಸುಮಾರು ₹26.18 ಕೋಟಿ ವೆಚ್ಚದಲ್ಲಿ ಈ ರೈಲು ನಿಲ್ದಾಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ನವೀಕರಣದ ಬಳಿಕ ಪ್ರಯಾಣಿಕರಿಗಾಗಿ ವಿಶಾಲ ನಿರೀಕ್ಷಣಾ ಕೊಠಡಿಗಳು, ಆಧುನಿಕ ಟಿಕೆಟ್ ಕೌಂಟರ್ಗಳು, ವಾಹನಗಳ ಪ್ರತ್ಯೇಕ ಡ್ರಾಪ್ ಮತ್ತು ಪಿಕ್ಅಪ್ ವಲಯ, ಸುಧಾರಿತ ಪ್ಲಾಟ್ಫಾರ್ಮ್ಗಳು, ಸಂಪೂರ್ಣ ಶೆಲ್ಟರ್ ವ್ಯವಸ್ಥೆ, ಎಲ್ಇಡಿ ಬೆಳಕು, ಡಿಜಿಟಲ್ ಮಾಹಿತಿ ಫಲಕಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಂಟ್ವಾಳವೂ ಒಂದಾಗಿದೆ. ಈ ನವೀಕರಣದಿಂದ ಪ್ರಯಾಣಿಕರಿಗೆ ಸುರಕ್ಷಿತ, ಸುಲಭ ಹಾಗೂ ಉತ್ತಮ ಪ್ರಯಾಣದ ಅನುಭವ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಯೋಜನೆಯನ್ನು ಸ್ವಾಗತಿಸಿದ್ದು, ಬಂಟ್ವಾಳದ ಅಭಿವೃದ್ಧಿಗೆ ಇದು ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

